ಪ್ರಾಣದಾನ ಮಾಡಿದವನ ಜೀವನಗತಿ ಬದಲಿಸಿದ ಶ್ವಾನ
ಮಾನವನ ಪರಮಾಪ್ತ ಮಿತ್ರ ಶ್ವಾನಗಳ ಲೋಕ, ಮಾನವ ಸಮಾಜದ ಹಾಗೆ ಶ್ರೇಣಿಕೃತ. ಟಿಬೆಟನ್ ಮಾಸ್ಟಿಫ್ನಂತಹಾ ಶ್ರೇಷ್ಠ ತಳಿಯ ನಾಯಿಗಳ ಬೆಲೆ ರೂ 18 ಕೋಟಿ. ಅವುಗಳದ್ದು ಸದಾ ರಾಜ/ರಾಣಿ ವೈಭೋಗ. ಸತ್ತರೆ ಅದ್ಧೂರಿ ಅಂತ್ಯ ಕ್ರಿಯೆ. ಹಾಗಿದ್ದಲ್ಲಿ ‘ಮಾನವ ಜನ್ಮ ಬಲು ದೊಡ್ಡದು ಎಂಬುದಕ್ಕೆ ಏನರ್ಥ?’ ಅನ್ನಬೇಡಿ. ನಾಯಿಗೆ ಬೆಲೆ ಕಟ್ಟುವುದು ಮಾನವ ತಾನೆ?
ಅಪರಾಧ ಪತ್ತೆಯಲ್ಲಿ ಬಳಸಲಾಗುವ ಶ್ವಾನದಳಕ್ಕೆ ಅದೆಂಥಾ ರಾಜ ಮರ್ಯಾದೆ! ಅಂಚೆ ಚೀಟಿಯಲ್ಲೂ ರಾರಾಜಿಸುವ ಭಾಗ್ಯ ಪಡೆದಿರುವ ಚುರುಕು, ಚಾಣಾಕ್ಷ, ಬಲಶಾಲಿ, ಪರಮ ನಿಷ್ಠಾವಂತ, ನಿಪುಣ ಬೇಟೆ ನಾಯಿ ‘ಮುಧೋಳ್ ಹೌಂಡ್’ ಕನ್ನಡಿಗರ ಹೆಮ್ಮೆ. ಸೇನೆ, ಸಿಆರ್ ಪಿ ಎಫ್. ಪೊಲೀಸ್ ಇಲಾಖೆ ಇತ್ಯಾದಿಗಳಲ್ಲಿ ‘ಉದ್ಯೋಗ’ ಗಿಟ್ಟಿಸಿಕೊಂಡ ಈ ಶ್ರೇಷ್ಠ ತಳಿಯ ಶ್ವಾನವನ್ನು ಮುಧೋಳದ ಸುಮಾರು 750 ಕುಟುಂಬಗಳು ಸಾಕಣಿಕೆ ಮಾಡುತ್ತವೆ. ಆದರೇನಂತೆ ಈ ಅಮೂಲ್ಯ ತಳಿ ನಾಯಿಗಳ ಬೆಲೆ ಏನೆಂಬುದು ಅವುಗಳಿಗೇ ಗೊತ್ತಿಲ್ಲ. ಅಂದ ಹಾಗೆ, ಪ್ರಾಣಿಗಳು ಮಾನವನಿಗೆ ಬೆಲೆ ಕಟ್ಟುವುದಿದ್ದರೆ ಅವುಗಳ ಮಾರುಕಟ್ಟೆಯಲ್ಲಿ ನಮ್ಮ ಬೆಲೆ ಎಷ್ಟಿರಬಹುದು?
‘ಹೀಗೇಕೆ ನಿನಗೆ ಏಕಾಂಗಿ ಬದುಕು. . .’ ಹಾಡಿನ ಸಾಲು ಕೇಳಿ ಮನಕರಗುವ ನಾವು ಸಾಕು ಪ್ರಾಣಿಗಳ ಒಂಟಿತನವನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ತಮ್ಮ ಮಕ್ಕಳಿಗೆ ಮುತುವರ್ಜಿಯಿಂದ ಮದುವೆ ಮಾಡುವವರು, ಸಾಕು ಪ್ರಾಣಿಗಳಿಗೆ ಮಾತ್ರ ಜೀವನಪರ್ಯಂತ ಒಬ್ಬಂಟಿತನದ ಶಿಕ್ಷೆ ಕೊಡುತ್ತ್ತಾರೆ. ಪ್ರಾಣಿದಯಾ ಸಂಘಗಳು ಕೂಡಾ ಈ ವಿಷಯದಲ್ಲಿ ‘ಮೂಕ ಪ್ರಾಣಿ’ಗಳಾಗಿವೆ!
ಆ ಮಟ್ಟಿಗೆ ಬೀದಿ ನಾಯಿಗಳು ವಾಸಿ. ಅವುಗಳದ್ದು ಎಲ್ಲಾ ಮುಕ್ತ, ಮುಕ್ತ. ವಿವಾಹ, ವಿಚ್ಛೇದನ, ದ್ವಂದ್ವ, ಆಷಾಢಭೂತಿತನ ಇದಾವುದಕ್ಕೂ ಅಲ್ಲಿ ಸ್ಥಾನವಿಲ್ಲ. ಇದನ್ನು ಬಿಟ್ಟರೆ, ಬೀದಿ ನಾಯಿಗಳ ಬಾಳು ಕರುಣಾಜನಕ. ಸಿಕ್ಕಿದ್ದನ್ನು ತಿಂದು, ಕಚ್ಚಾಡಿ, ಗಲ್ಲಿ ಗಲ್ಲಿ ಅಲೆದು ಕೊನೆಗೆ ಬೀದಿ ಹೆಣವಾಗುವ ಅವುಗಳನ್ನು ಕೂಡಾ ಆರೈಕೆ ಮಾಡುವವರು ಮತ್ತು ಅಂಥಾ ಸಮಾನ ಮನಸ್ಕರ ಸಂಘ, ಸಂಸ್ಥೆಗಳು ಇವೆ; ನಿಜ. ಆದರೆ ಎಲ್ಲಾ ಬೀದಿ ನಾಯಿಗಳಿಗೆ ಆ ಭಾಗ್ಯವಿದೆಯೆ?
ಈ ಬೀದಿ ನಾಯಿಗಳ ಬಾಳಚಕ್ರ ಕೆಲವೊಮ್ಮೆ ತಟಸ್ಥವಾಗುವುದು, ರಸ್ತೆಯಲ್ಲಿ ಅವುಗಳ ಮೇಲೆ ವಾಹನಗಳ ಚಕ್ರ ಹರಿದಾಗ. ಇಂಥಹಾ ಶ್ವಾನಗಳ ನಾಯಿಪಾಡಿನ ಸಾವು ಮುಂಬಯಿಯ ತರುಣನೊಬ್ಬನ ಬಾಳಪಥವನ್ನು ಬದಲಿಸಿದ ಕಥೆ ಪ್ರೇರಣಾದಾಯಕವಾಗಿದೆ.
ಶಂತನು ನಾಯ್ಡು ಟಾಟಾ ಸಮೂಹ ಸಂಸ್ಥೆಯ ಸಾಮಾನ್ಯ ತರುಣ ಉದ್ಯೋಗಿ. ಒಂದು ಸಂಜೆ ಕಾರುಗಳ ಅಡಿ ಸಿಕ್ಕಿ ಸತ್ತು ಬಿದ್ದ ಬೀದಿನಾಯಿಯ ದಾರುಣ ಅಂತ್ಯ ಅವನ ಮನಕಲಕುತ್ತದೆ. ಅವನು, ವಾಹನ ಚಾಲಕರಿಗೆ ರಾತ್ರಿವೇಳೆ ಬೀದಿ ನಾಯಿಗಳು ಸರಿಯಾಗಿ ಗೋಚರಿಸಬಲ್ಲಂತಹಾ ರಿಫ್ಲೆಕ್ಟರ್ (ಅದು ಬೆಳಕು ಪ್ರತಿಫಲಿಸುವಂತೆ ಮಾಡಬಲ್ಲುದು)ನ್ನು ಆವಿಷ್ಕರಿಸುತ್ತಾನೆ. ಅವನು, ಅವನ ಗೆಳೆಯರು ರಿಫ್ಲೆಕ್ಟರ್ಗಳನ್ನು ಬೀದಿ ನಾಯಿಗಳ ಕೊರಳುಗಳಿಗೆ ಬಿಗಿಯುತ್ತಾರೆ. ಮರುದಿನ, ಆ ರಿಫ್ಲೆಕ್ಟರ್ ಒಂದು ಬೀದಿ ನಾಯಿಯ ಪ್ರಾಣ ಉಳಿಸಿತು ಎಂಬ ಫೋನ್ ಕರೆ ಅವರಿಗೆ ಬರುತ್ತದೆ! ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತದೆ. ಆ ರಿಫ್ಲೆಕ್ಟರ್ಗಳಿಗೆ ಭಾರೀ ಬೇಡಿಕೆ ಬರುತ್ತದೆ. ಬೇಡಿಕೆಗೆ ತಕ್ಕಷ್ಟು ಅವುಗಳನ್ನು ತಯಾರಿಸಲು ಅವರ ಬಳಿ ಹಣವೆಲ್ಲಿದೆ? ಆಗ ಅವನ ತಂದೆ, ‘ಶ್ವಾನಪ್ರಿಯರಾದ ರತನ್ ಟಾಟಾ ಅವರನ್ನು ನೀನೇಕೆ ಸಂಪರ್ಕಿಸಬಾರದು?’ ಎಂದು ಸಲಹೆ ನೀಡುತ್ತಾರೆ. ಸರಿ, ಶಂತನು ಈ ಕುರಿತು ಅವರಿಗೆ ಒಂದು ಪತ್ರ ಬರೆಯುತ್ತಾನೆ, ಮತ್ತದನ್ನು ಮರೆತು ಬಿಡುತ್ತಾನೆ. ಎರಡು ತಿಂಗಳ ಬಳಿಕ ಅವನ ಬದುಕಿನ ಪರಮಾಶ್ಚರ್ಯವೊಂದು ರತನ್ ಟಾಟಾ ಅವರ ಸಹಿ ಇರುವ ಉತ್ತರದ ರೂಪದಲ್ಲಿ ಎದುರಾಗುತ್ತದೆ. ‘ನೀನು ಮಾಡಿರುವ ಕೆಲಸ ನನಗೆ ಮೆಚ್ಚುಗೆಯಾಗಿದೆ. ಒಮ್ಮೆ ನನ್ನನ್ನು ಭೇಟಿಯಾಗು’ ಎಂಬ ಪತ್ರದ ಸಾರಾಂಶ ಅನುಸರಿಸಿ ಅವನು ಅವರನ್ನು ಭೇಟಿಯಾಗುತ್ತಾನೆ. ಅವರು ಅವನನ್ನು ತಮ್ಮ ಖಾಸಗಿ ಜಾಗಕ್ಕೆ ಕರೆದೊಯ್ದು ತಮ್ಮ ಸಾಕುನಾಯಿಗಳನ್ನು ತೋರಿಸಿ ಅವನೊಂದಿಗೆ ಹರಟುತ್ತಾರೆ. ಅವನ ಯೋಜನೆಗೆ ಹಣ ನೀಡಲು ಒಪ್ಪುತ್ತಾರೆ. ಅವರಿಬ್ಬರೂ ಪರಮಾಪ್ತ ಸ್ನೇಹಿತರಾಗುತ್ತಾರೆ. ಮುಂದೆ ವಿದೇಶದಲ್ಲಿ ಎಂ ಎಸ್ಸಿ ಮುಗಿಸಿ ಬಂದ ಶಂತನು, ರತನ್ ಟಾಟಾರ ಕೋರಿಕೆಯಂತೆ ಟಾಟಾ ಟ್ರಸ್ಟ್ನಲ್ಲಿ ನೇರವಾಗಿ ಅವರಿಗೆ ಸಹಾಯಕನಾಗಿ ಕೆಲಸಕ್ಕೆ ಸೇರುತ್ತಾನೆ. ತನ್ನ ಸಮಾನವಯಸ್ಕರು ಉದ್ಯೋಗಕ್ಕಾಗಿ ಅಲೆಯುತ್ತಿರಬೇಕಾದರೆ ತಾನು ರತನ್ ಟಾಟಾರಂಥ ದಿಗ್ಗಜರನ್ನು ಬಾಸ್ ಆಗಿ, ಸಹೋದ್ಯೋಗಿಯಾಗಿ, ಗುರುವಾಗಿ ಪಡೆದ ವಿದ್ಯಮಾನಕ್ಕೆ ಶಂತನು ಚಕಿತನಾಗುತ್ತಾನೆ!
ಮುಂಬಯಿಯ ಬೀದಿ ನಾಯಿಗಳಿಗೆ ಇದು ಶುಕ್ರದೆಸೆಯ ಪ್ರಾರಂಭವೇನೋ?. ಅಲ್ಲಿನ ಪಾಲಿಕೆ ಸಿಬ್ಬಂದಿ ಚರಂಡಿಗೆಸೆದುದರಿಂದ, ಹೆಗ್ಗಣ, ಕ್ರಿಮಿ ಕೀಟಗಳಿಗೆ ಆಹಾರವಾಗುತ್ತಿದ್ದ ಬೀದಿನಾಯಿಯ ಕಳೇಬರ ಕಂಡು ಉತ್ಪಲ್ ಖೋಟ್ ಅನ್ನುವ ಸಹೃದಯಿ ಒಬ್ಬರು www.change.com ವೆಬ್ಸೈಟ್ ನಲ್ಲಿ ‘ಪ್ರತಿ ಜಿಲ್ಲೆಯಲ್ಲೂ ಪ್ರಾಣಿಗಳಿಗೆ ಒಂದು ಶ್ಮಶಾನ ಇರಬೇಕು’ ಎಂಬ ನೂತನ ಮನವಿ ಸಲ್ಲಿಸಿ, ಸದಸ್ಯರ ಬೆಂಬಲ ಕೋರಿದ್ದಾರೆ.
ಮಾನವನ ಪರಮಾಪ್ತ ಸ್ನೇಹಿತ ಮೂಕಪ್ರಾಣಿ, ಮಾನವರನ್ನು ಬೆಸೆಯುತ್ತಿದ್ದಾನೆ, ಅವನ ಕಣ್ಣು ತೆರೆಸುತ್ತಿದ್ದಾನೆ.
Comments
Post a Comment