Skip to main content
(ಡಿಸೆಂಬರ್ 11, 2016ರ ‘ಉದಯವಾಣಿ-ಸಾಪ್ತಾಹಿಕ ಸಂಪದ’ದಲ್ಲಿ ಪ್ರಕಟವಾದ ನನ್ನ ಕಥೆ) 
                                                    ವಿಂಟೇಜ್ ಬದುಕು 
ಓದುವುದು, ಭಾವುಕಳಾಗುವುದು, ಸಿಡಿದೇಳುವುದು, ಅಸಹಕಾಯತೆಗೆ ಮರುಗುವುದು ಬೇರಿನ್ನೇನೂ ಮಾಡಲು ತೋಚದೆ ಬರೆಯುವುದು---ಅಂಥವಳು ಪತ್ರಕರ್ತೆಯಾಗದೆ ಬೇರಿನ್ನೇನು ಮಾಡುವುದು? ಹಾಗಂದುಕೊಳ್ಳುತ್ತಲೇ, ನಡು ನಡುವೆ ಏನೇನೋ ವೃತ್ತಿಯಲ್ಲಿ ತೊಡಗಿ, ಕೊನೆಗೂ ಅಂತರಾಳದ ದನಿಗೆ ಓಗೊಟ್ಟು, ಪತ್ರಕರ್ತೆಯಾದ ಸರ್ವಸ್ವ-ಆ ಮನೆಯ ಗೇಟು ತೆರೆಯುವ ಮುನ್ನ ಗೇಟನ್ನು ಅಲುಗಾಡಿಸಿ ಠಣ ಠಣ ಸದ್ದು ಮಾಡಿ ನಾಯಿ ಕಟ್ಟಿ ಹಾಕಿರುವುದನ್ನು ಖಚಿತಪಡಿಸಿಕೊಳ್ಳಲು ಮರೆಯಲಿಲ್ಲ. ‘ಸದಾ ಎಚ್ಚರವಾಗಿರು.’ ಗುರುಗಳು ಹೇಳಿದ ಪಾಠ.
ಅಂಗಳದೊಳಗೆ ಕಾಲಿಡುತ್ತಿದ್ದಂತೆ, ಓಡೋಡಿ ಬಂದ ಸೆಕ್ಯೂರಿಟಿಯವ ಅವಳ ಹೆಸರನ್ನು ತಪ್ಪು ತಪ್ಪಾಗಿ ಹೇಳಿ (ಹೆಚ್ಚಿನವರು ತನ್ನ ಹೆಸರನ್ನು ಏನೇನೋ ಹೇಳಿ ಸರಿಪಡಿಸಿಕೊಳ್ಳುವುದು ಅವಳಿಗೆ ಅಭ್ಯಾಸವಾಗಿ ಹೋಗಿದೆ) ‘ಸಾಹೇಬ್ರು ನಿಮ್ಮನ್ನೇ ವೇಟ್ ಮಾಡ್ತಿದ್ದಾರೆ’ ಅಂದು ತೆರೆದ ಬಾಗಿಲಿನೆಡೆಗೆ ಕೈತೋರಿದ.
ಅಲ್ಲಿ ಜುಬ್ಬ ಪೈಜಾಮ ಧರಿಸಿದ ಓರ್ವ ಅರುವತ್ತರ ಆಸುಪಾಸಿನ ವ್ಯಕ್ತಿ ‘ಹಲೋ’ ಅನ್ನುತ್ತಾನೆ---ಎಂದು ಅಂದುಕೊಂಡವಳಿಗೆ ಎದುರಾದದ್ದು ಟೀ ಶರ್ಟ್ ಧರಿಸಿದ, ಡೈ ಮಾಡಿದ ಹಾಗಿರುವ ದಟ್ಟ ಕಪ್ಪು ಕೂದಲಿನ, ಐವತ್ತರ ಅಂಚಿನಲ್ಲಿರುವುದನ್ನು ಮರೆಮಾಚಲು ಕಸರತ್ತು ಮಾಡುವಂತಿರುವ ಗಂಡಸು. ಕಂಗಳ ಪ್ರಖರ ಹೊಳಪಿನಿಂದಲೇ ಆಹ್ವಾನಿಸುತ್ತಿದ್ದಾನೆ ಅನಿಸುವ ಭಾವ ಸೂಚಿಸಿದ ಅವನು “ಒಳಗ್ಬನ್ನಿ” ಅಂದು ಮುಗುಳ್ನಕ್ಕಾಗ ಅವಳಲ್ಲಿ ಮೊದಲು ಮೂಡಿದ್ದು ಆತ್ಮೀಯತೆಯಂತು ಖಂಡಿತಾ ಅಲ್ಲ. ಸಾಲದಕ್ಕೆ ಅವನು “ಮಿಸ್ ಆರ್ ಮಿಸ್ಸೆಸ್ ಸರ್ವಸ್ವ?” ಅಂದಾಗಲಂತೂ ಅವಳಿಗೆ ‘ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಇಲ್ಲಿಂದ ಕಾಲು ಕೀಳಬೇಕು’ ಎಂದನಿಸಿತು.
“ಮಿಸ್ ಅನ್ನಿ”
“ಓಕೆ. ಫೈನ್”
‘ನೀವು ತಪ್ಪು ತಿಳ್ಕೊಳ್ಳಲ್ಲಾ ಅಂದ್ರೆ, ಒಂದ್ಮಾತು--- ಐ ಯಾಮ್ ಇನ್ ಎ ಹರಿ. ಎಲ್ಲಿದೆ ನಿಮ್ಮ ವಿಂಟೇಜ್ ಕಾರ್--- ಕಾರ್ ಗಳು?” ಅವನ ಕಂಗಳಿಂದ ದೃಷ್ಟಿ ಕೀಲಿಸಿ, ಸಿಡುಕುವ ಹಾಗೆ ನುಡಿದಳು.
ಕಣ್ಣಲ್ಲಿ ಕಣ್ಣಿಟ್ಟು ನೋಡದವಳು ಗುಪ್ತವಾಗಿ ರವಾನಿಸಿದ ಸಂದೇಶ ಕೆಲಸ ಮಾಡಿತು.
ಅವನು ಧಾಟಿ ಬದಲಿಸಿದ.
“ಈಗಾಗಲೇ ಒಳಗೆ ಬಂದಿದ್ದೀರಾ…ಆಗಲೇ ಹೊರಡುವ ಮಾತೇಕೆ? ಏನು ತಗೋಳ್ತೀರಿ? ಕಾಫಿ, ಟೀ, ಜ್ಯೂಸ್… ( ‘ಸಂತಿಂಗ್ ಹಾಟ್’ ಎಂಬ ಮಾತು ನಾಲಿಗೆ ದಾಟಲಿಲ್ಲ.)
“ ಖಂಡಿತಾ! ಆದ್ರೆ ಅದೆಲ್ಲಾ ಆಮೇಲೆ---ಡ್ಯೂಟಿ ಫಸ್ಟ್”
“ಓಕೆ ಓಕೆ---ನನ್ ಜೊತೆ ಬನ್ನಿ”
ಹೊರಗಡೆ ಹೊರಟ ಅವನನ್ನು ಹಿಂಬಾಲಿಸಿದವಳು ಒಂದು ಸಮಾಧಾನದ ನಿಟ್ಟುಸಿರು ಬಿಟ್ಟಳು. ಆದರೆ ಅವನು ಮನೆಯ ಹಿಂಭಾಗದ ಗ್ಯಾರೇಜ್ ಕಡೆಗೆ ಹೋಗುತ್ತಿದ್ದಾನೆ ಎಂದು ಅರಿವಾದಾಗ ಅವಳಲ್ಲಿ ಪುನಃ ಆತಂಕ ಶುರುವಾಯಿತು. ಅಲ್ಲಿ ಏನು ನಡೆದರೂ ಯಾರಿದ್ದಾರೆ ಕೇಳುವವರು?
“ ನಾನೊಬ್ಬ ಡಿವೋರ್ಸಿ---ಸಾರಿ ನೀವು ಬಂದಿರೋದು ನನ್ನ ಸಂದರ್ಶನ ಮಾಡಲು ಅಲ್ಲ, ನನ್ನ ಕಾರುಗಳ ಸಂದರ್ಶನ ಮಾಡಲು ತಾನೆ?”
ಅವಳು ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಬದಲಾಗಿ ತನ್ನ ಗೆಳತಿ ಹವ್ಯಾಸಿ ಪತ್ರಕರ್ತೆ ಸುರಭಿಗೆ ಫೋನ್ ಮಾಡಿ ತಾನಿರುವ ಜಾಗ ವಿಳಾಸ ಎಲ್ಲವನ್ನೂ ಅವನಿಗೆ ಕೇಳಿಸುವಂತೆ ಏರುದನಿಯಲ್ಲಿ ಹೇಳಿ, ‘ನಾನು ಅರ್ಧ ಗಂಟೆನಲ್ಲಿ ಅಲ್ಲಿರುತ್ತೇನೆ. ಇಲ್ಲಾಂದ್ರೆ ನೀನೆ ಇಲ್ಲಿಗೆ ಬಂದು ಬಿಡು’ ಅನ್ನುತ್ತಾ ಅವನೆಡೆಗೆ ವಾರೆ ನೋಟ ಬೀರಿದಳು. ಅದು ಕೂಡಾ ಪತ್ರಕರ್ತ ಗುರು ಹೇಳಿದ ಪಾಠ. (‘ನಿನ್ನನ್ನು ಹೇಳೋರು ಕೇಳೋರು ಇದ್ದಾರೆ ಎಂಬುದನ್ನು ಸೂಚ್ಯವಾಗಿ ತಿಳಿಸು’)
ಅವನಿಗೆ ಅರ್ಥವಾಯಿತು. ಈ ಪತ್ರಕರ್ತೆಯರ ಸಹವಾಸವೇ ಬೇಡ ಅಂದುಕೊಂಡ ಅವನು ವೇಗವಾಗಿಯೇ ಗ್ಯಾರೇಜ್ ತಲುಪಿದ.   
ಅವನು ಗ್ಯಾರೆಜ್ ಬಾಗಿಲು ತೆಗೆಯುತ್ತಿದ್ದಂತೆ ಒಂದು ಹಳೆಯ ಫಿಯೆಟ್ ಹಾಗೂ ಫೋರ್ಡ್ ಕಾರುಗಳು ಅನಾವರಣಗೊಂಡವು. ತಾನು ಸಿದ್ಧಪಡಿಸಿದ ಪ್ರಶ್ನಾವಳಿಗೆ ಅವಳು ಅವನಿಂದ ಉತ್ತರಗಳನ್ನು ಪಡೆದುಕೊಂಡಳು. ಹತ್ತು ಹಲವು ಕೋನಗಳಿಂದ ಅವುಗಳ ಫೊಟೋ, ಅವುಗಳೊಂದಿಗೆ ಸೆಲ್ಫಿ ಎಲ್ಲಾ ಆಯಿತು. ಅವಳ ಮನಸ್ಸೂ ಹಾಗೇನೆ, ಸ್ವಲ್ಪ ಹಗುರವಾಯಿತು.
ಅವನು ಕೂಡಾ ಮನಸು ಬಿಚ್ಚಿ ಮಾತನಾಡಲು ತೊಡಗಿದ. ಫಿಯೆಟ್ ಕಾರು ಅಜ್ಜನದ್ದೆಂದೂ, ಫೋರ್ಡ್ ಕಾರು ಮುಂಬಯಿಯ ಉದ್ಯಮಿಯೊಬ್ಬರಿಂದ ಕೊಂಡುಕೊಂಡದ್ದು ಎಂದೂ ಹೇಳಿದ. ಹೇಳಿದ್ದು ಮಾತ್ರವಲ್ಲ ಅವನು ಹೆಮ್ಮೆಯಿಂದ ಬೀಗಿದ ಅನಿಸಿತು ಅವಳಿಗೆ. ಒಂದು ಕಾಲದಲ್ಲಿ ಯಾರ್ಯಾರದ್ದೋ ಹೊಸ ಕಾರು ಎಂದು ಮೆರೆದು ಈಗ ವಿಂಟೇಜ್ ಕಾರುಗಳೆಂದು ವಿರಮಿಸುತ್ತಿರುವ ಅವುಗಳ ದೆಸೆ ಕಂಡು ಅವಳು ವಿಚಲಿತಳಾದಳು. ನೋಡಲು ಲಾಯಕ್ಕು, ಓಡಿಸುವುದಕ್ಕಲ್ಲ ಎಂಬ ಅವುಗಳ ಪಾಡು ನೋಡಿ, ಕಾರುಗಳಲ್ಲದ ಮನುಷ್ಯರ ಅವಸ್ಥೆ ಅದಕ್ಕಿಂತ ಕಡೆ ಎಂಬ ಯೋಚನೆ ಅವಳಲ್ಲಿ ಹಾದು ಹೋಯಿತು.   
“ಬರಿ ಕಾರುಗಳು ಮಾತ್ರವಲ್ಲ, ವಿಂಟೇಜ್ ಅನಿಸಿದ್ದನ್ನೆಲ್ಲಾ ನಾನು ಸಂಗ್ರಹಿಸುತ್ತೇನೆ. ಅವುಗಳದ್ದೇ ಒಂದು ಪ್ರೈವೇಟ್ ಮ್ಯೂಸಿಯಂ ಮಾಡೋದು ನನ್ನ ಸೀಕ್ರೆಟ್ ಎಂಬಿಷನ್! ಇವುಗಳಿಂದ ನನಗೆ ಒಂದು ಐಡೆಂಟಿಟಿ ಬಂದಿದೆ. ಈಗ ಇರೋ ಬರಿ ಎರಡು ಕಾರುಗಳು ಮತ್ತೊಂದಿಷ್ಟು ಐಟಂ ನೋಡೋಕೆ ಅಂತಾನೆ ಎಷ್ಟೊಂದು ಜನ ಬರ್ತಿರ್ತಾರೆ ಗೊತ್ತಾ?” ಅಂದನವ.
“ ಉಳಿದವರ ಪಾಲಿಗೆ ಅವುಗಳು ಗುಜರಿ ಐಟಂ ಇರಬಹುದು. ನನಗಲ್ಲ. ನನಗೆ ಅವುಗಳು ಜೀವಂತ ಅನಿಸುತ್ತವೆ. ಅವುಗಳು ಯಾವುದೋ ಗತಕಾಲದ ವೈಭವದ ಪಳೆಯುಳಿಕೆಗಳಾಗಿ ನಮಗೆ ಸಮಾಧಾನ ಹೇಳುತ್ತವೆ---ಎಲ್ಲಾ ಅಳಿದ ಮೇಲೆಯೂ ಏನೋ ಒಂದು ಉಳಿಯುತ್ತದೆ. ಕಾಲಕ್ಕೆ ಸವಾಲು ಹಾಕಿದ ಹಾಗೆ!”ಅವನು ಮಾತು ಮುಂದುವರಿಸಿದ.
ಅವನ ವ್ಯಾಖ್ಯಾನದಿಂದ ಅವಳಿಗೆ ಅವನ ಮೇಲಿನ ತಿರಸ್ಕಾರ ಕೊಂಚ ಕಡಿಮೆಯಾಯಿತು. ‘ಪರವಾಗಿಲ್ವೇ? ವಿಶ್ಲೇಷಣೆ ಚೆನ್ನಾಗಿದೆ’ ಅಂದುಕೊಂಡಳು.
ಅಷ್ಟರಲ್ಲಿ ಒಂದು ಫೋನ್ ಕರೆ ಬಂತು. ಅವನು ಕೋಪದಿಂದ ಆರ್ಭಟಿಸಲು ಶುರು ಮಾಡಿದ!
       “ಯಾವಾಗ್ಲೂ ಇದೇ ಮಾತು ನಿಂದು. ಲೇಟ್ ಮಾಡೋದು--- ಆ ಮೇಲೆ ಅಮ್ಮಂಗೆ ಹುಷಾರಿಲ್ಲ, ಬರೋಕಾಗಲ್ಲ ಅನ್ನೋದು. ಇಂದು ವಿಸಿಟರ್ ಬೇರೆ ಇದ್ದಾರೆ. ನೀನು ಬಂದಿದ್ರೆ ಚೆನ್ನಾಗಿತ್ತು!”
ಕಾಲ್ ಕಟ್ ಮಾಡಿ ‘ಮನೆ ಕೆಲ್ಸದವ್ಳು---ಅದೇ ರಾಗ! ಅಮ್ಮನಿಗೆ ಹುಷಾರಿಲ್ಲ, ಬರೋಕಾಗಲ್ಲ. ಥ್ಯಾಂಕ್ ಗಾಡ್! ಅವ್ಳ ತಂದೆ ಬದುಕಿಲ್ಲ!”
ಅವನ ಕೊನೆ ಸಿಡಿಯ ಕಠೋರತೆ ಅವಳ ಮನಸ್ಸನ್ನು ತಿವಿಯತೊಡಗಿತು. ಅವಳೆಡೆಗೆ ತಿರುಗಿದ ಅವನು “ನೋಡಿ ನಾನು ಕೂಡಾ ನಿಮ್ ಥರಾನೆ. ಐ ಯಾಮ್ ಆಲ್ಸೋ ಇನ್ ಎ ಹರಿ. ನನ್ನ ಕಂಪನಿ ಇರೋದು ಪೀಣ್ಯದಲ್ಲಿ. ಇಮಾಜಿನ್…ಜಯನಗರದಿಂದ ಪೀಣ್ಯವರೆಗೆ-- ನಿಮಗೆ ಅಪಾಯಿಂಟ್ ಮೆಂಟು ಕೊಟ್ಟಿದ್ದಕ್ಕೆ ಇಲ್ಲಿ ತನಕ ಮನೆನಲ್ಲಿದ್ದೆ. ನಾನಿನ್ನು ಹೊರಡ್ಬೇಕು. ಇನ್ನೂ ಏನಾದರೂ ಕೇಳೋದು ಬಾಕಿ ಇದೆಯಾ?” ಅಂದ. ಅವನ ಕೋಪ ಇನ್ನೂ ಆರಿರಲಿಲ್ಲ.
“ನೀವು ಒಂದು ಕೆಲ್ಸ ಮಾಡಿ. ನನ್ನ ಕಂಪನಿ ಮತ್ತು ನನ್ನ ವಿವರ ವೆಬ್‍ಸೈಟ್‍ನಿಂದ ತಕ್ಕೊಂಡು ಬಿಡಿ. ವೆಬ್ ಅಡ್ರಸ್ ವಿಸಿಟಿಂಗ್ ಕಾರ್ಡ್‍ನಲ್ಲಿದೆ. ಅಂದ್ಹಾಗೆ ಮರ್ತು ಬಿಟ್ಟೆ--- ನೀವು ಕಾಫಿ ಟೀ ಆಮೇಲೆ ಅಂದಿದ್ದು” ಅಂದ ತೀರಾ ಅವಸರದಲ್ಲಿರುವವನಂತೆ.
‘ಹೌದಲ್ಲ? ಅವನ ಮನೆ, ಅವನ ಕಾರು, ಅವನ ಸಮಯ! ನನಗೆಲ್ಲಿದೆ ‘ಪುರುಸೊತ್ತಿಲ್ಲ’ ಅನ್ನುವ ಹಕ್ಕು? ಇನ್ನು ಇವನ ಕಾಫಿ, ಟೀ ಕುಡಿತಾ ಕುಂತ್ರೆ ಆ ದೇವ್ರು ಕ್ಷಮಿಸ್ತಾನಾ?’ ಹಾಗಂದುಕೊಂಡ ಸರ್ವಸ್ವ
“ಪರವಾಗಿಲ್ಲ---ನೀವು ಯಾಕೆ ತೊಂದರೆ ತಗೊಳ್ತೀರ?” ಅನ್ನುತ್ತಾ ಹೊರಡಲು ಅನುವಾದಳು.
“ಪಬ್ಲಿಶ್ ಆದ ಒಂದು ಕಾಪಿ ನಿಮಗೆ ತಲುಪಿಸುತ್ತೇನೆ” ಎನ್ನಲು ಅವಳು ಮರೆಯಲಿಲ್ಲ.
ಅವನು ಗೇಟ್ ತನಕ ಬಂದು ಅವಳನ್ನು ಬೀಳ್ಕೊಟ್ಟ.

ಸ್ಕೂಟರ್ ಏರುವ ಮುನ್ನ ಸುರಭಿಗೆ ಕರೆ ಮಾಡಿದಳು.
“ ಹಾಯ್! ಏನೋ ಗಾಭರಿ ಆದಂತಿತ್ತು ನೀನು? ಅವನು ಅಂತವ್ನಾ?” ಅತ್ತಲಿಂದ ಸುರಭಿ.
“ ಗಾದೆ ಗೊತ್ತಲ್ಲ? ‘ಹೇಳದೇ ಮಾಡುವವನು---’ ಯಾಕೋ ಅವನು ಫೋನ್ ನಲ್ಲಿ ಮಾತನಾಡಿದವನಂತೆ ಇರಲಿಲ್ಲ. ಅವನ ಪ್ರತಿ ನಡೆಯಲ್ಲೂ ಬಯಕೆ ಸೂಸಿದಂತಿತ್ತು. ಅಂತೂ ಅವನಿಂದ ಬಿಡುಗಡೆಯಾದಾಗ ಮನಸ್ಸು ನಿರಾಳವಾಯಿತು.
ಇನ್ನು ಇವತ್ತು ಎಲ್ಲೂ ಹೋಗೋದಿಲ್ಲ. ಈ ಜಯನಗರದಲ್ಲೇ ಇನ್ನೊಂದು ಮನೆ ಇದೆ ವಿಂಟೇಜ್ ಕಾರ್ ಇರೋಂತದ್ದು. ಏನಾದ್ರು ಎಕ್ಸ್‍ಕ್ಯೂಸ್ ಹೇಳಿ ಮೀಟಿಂಗ್ ಕ್ಯಾನ್ಸಲ್ ಮಾಡ್ತೇನೆ. ಊಟ ಫಸ್ಟ್. ಜರ್ನಲಿಸ್ಟ್ ಆದ ತಪ್ಪಿಗೆ ಹೊಟ್ಟೆಗೆ ಶಿಕ್ಷೆ ಕೊಡೋದು ಯಾವ ನ್ಯಾಯ? ಸರಿ ನಿನ್ನ ಪ್ರಾಜೆಕ್ಟ್ ಏನಾಯ್ತು?”
“ನಂದೇನು ಇಂಟರೆಸ್ಟಿಂಗ್ ಇಲ್ಲ ಬಿಡು. ನಿನ್ ಥರ ಯಂಗ್, ಹ್ಯಾಂಡ್ ಸಮ್ ಗಂಡಸರನ್ನು ನಾನು ಭೇಟಿ ಮಾಡ್ತಿಲ್ಲವಲ್ಲ?” ಸುರಭಿಯ ಕೀಟಲೆಗೆ ನಗುವ ಮನಸ್ಥಿತಿಯಲ್ಲಿ ಸರ್ವಸ್ವ ಇರಲಿಲ್ಲ.
“ಸಾಕು ಮಾಡೆ ನಿನ್ನ ತಮಾಷೆ. ಹೇಗೋ ಅವನಿಂದ ಬಚಾವಾಗಿ ಬಂದೆ. ಅದರೆಡೆಗೆ ನಿನ್ನ ಜೋಕ್ಸ್ ಬೇರೆ!” ಅಂದು ಗದರಿದಳು ಸರ್ವಸ್ವ.
“ ಹಾಗೆ ನೋಡಿದರೆ ಒಂದರ್ಥದಲ್ಲಿ ನಮ್ಮಿಬ್ಬರ ಪ್ರಾಜೆಕ್ಟ್ ಹೆಚ್ಚು ಕಡಿಮೆ ಒಂದೇನೆ”
“ಅಂದ್ರೆ?”
“ನೀನು ಮೊದ್ಲು ಊಟ ಮುಗಿಸಿ ಆಫೀಸ್‍ಗೆ ಹೋಗು. ಉಳಿದದ್ದೆಲ್ಲ ಜೊತೆಯಲ್ಲಿ ಮಾತಾಡೋಣ. ಫೋನ್‍ನಲ್ಲಲ್ಲ”
------------- --------------- ------------
ಎರಡು ದಿನಗಳ ಅನಂತರ ಒಂದು ಸಂಜೆ, ‘ಜ್ಯೂಸ್ ಮ್ಯಾಟರ್ಸ್‘ ನಲ್ಲಿ ತನಗಿಂತ ಮೊದಲೇ ಬಂದು ಕಾಯುತ್ತಿದ್ದ ಸುರಭಿಯನ್ನು ಕಂಡು, ಸರ್ವಸ್ವಳನ್ನು ಅಪರಾಧಿ ಭಾವ ಕಾಡಿತು.
“ಐದೂ ವರೆ ಅಂದ್ರೆ ಮುಂಚೆನೆ ಬಂದು ಕಾಯೋದು ಯಾಕೆ?’’ ಹುಸಿ ಕೋಪ ಪ್ರದರ್ಶಿಸಿದಳು ಸರ್ವಸ್ವ.
“ನಿಂದು ಇದೇ ಏರಿಯಾ. ಆದ್ರೆ ನಾನು ಈ ಬೆಂಗ್ಳೂರು ಟ್ರಾಫಿಕ್ ನಲ್ಲಿ----“ ಸುರಭಿ ಹಾಗನ್ನುತ್ತಿರಬೇಕಾದರೆ ಸರ್ವಸ್ವ ಅವಳನ್ನು ತಡೆದಳು.
“ಸಾಕು! ಸಾಕು! ಈ ಟ್ರ್ಯಾಫಿಕ್ ಗೋಳಿನ ಕತೆ, ನಮ್ಮ ಮಾತುಕತೆಯನ್ನು ಜ್ಯಾಮ್ ಮಾಡೋದು ಬೇಡ”
“ಮೊದಲು ನಿನ್ನ ಪ್ರಾಜೆಕ್ಟ್ ಕತೆ ಹೇಳು”
ಅವಳು ಎಲ್ಲವನ್ನೂ ಹೇಳಿದಳು. ಅವನ ಕುರಿತು ಲೀಡ್ ಸಿಕ್ಕಿದಂದಿನಿಂದ ಅವನಿಗೆ ಫೋನ್ ಮಾಡಿದ್ದು, ಗುರುವಿನ ಸಲಹೆಯಂತೆ ಫೇಸ್ ಬುಕ್‍ನಲ್ಲಿ ಅವನನ್ನು ಸಂಪರ್ಕಿಸದೆ ಇದ್ದದ್ದು, ಅವನನ್ನು ಭೇಟಿ ಯಾದದ್ದು, ಅವನ ವರ್ತನೆ, ಚರ್ಯೆ ಎಲ್ಲವನ್ನೂ ಎಳೆಎಳೆಯಾಗಿ ಏಕಪಾತ್ರಾಭಿನಯ, ಮಿಮಿಕ್ರಿಯೊಂದಿಗೆ ಆಡಿ ತೋರಿಸಿದಳು.
“ಸರಿ, ಇನ್ನು ನಿನ್ನ ಕತೆ---‘ಅದರಲ್ಲಿ ಏನಿದೆ? ಅದರಲ್ಲಿ, ಅಂಥಾ ಸ್ವಾರಸ್ಯ ಇರಲು ಹೇಗೆ ಸಾಧ್ಯ?’ ಮೊದಲು, ಈ ರೀತಿ ಯಾವ ಟಿಪ್ಪಣಿಗಳು ಕೂಡಾ ಬೇಡ! ಒಟ್ಟು ನಡೆದದ್ದನ್ನು ಹೇಳು!” ಎಂದು ಸ್ವಲ್ಪ ಮಟ್ಟಿಗೆ ಸಿಡುಕಿದಳು ಸರ್ವಸ್ವ.
“ಓಕೆ! ಓಕೆ! ನಿನ್ನ ಅಪ್ಪಣೆಯಂತಾಗಲಿ. ಈಗ ಹೇಳುವಂತವಳಾಗುತ್ತೇನೆ! ನಾನು ಆ ವೃದ್ಧಾಶ್ರಮಕ್ಕೆ ಎಲ್ಲರಂತೆ ಹೋದೆ. ನಾನು ಯಾರು ಅನ್ನಲಿಲ್ಲ, ನನ್ನ ಉದ್ದೇಶ ಏನು ಅನ್ನಲಿಲ್ಲ. ನನ್ನ ಅಪ್ಪ ಅಮ್ಮನನ್ನು ಅಲ್ಲಿ ಸೇರಿಸುವ ಉದ್ದೇಶವಿದೆ ಅಂದೆ.”
“ಆಮೇಲೆ?”
“ ನಾನು ಒಳಗಡೆ ಎಲ್ಲಾ ನೋಡಿ ಬರಬಹುದೆ?” ಎಂದು ಕೇಳಿದೆ
“ ‘ಓ ಖಂಡಿತಾ!’ ಎಂದು ಒಬ್ಬಳು ಸ್ಟಾಫ್‍ನ್ನು ನನ್ನ ಜೊತೆ ಕಳಿಸಿದರು. ನಿನಗೆ ತಿಳಿದಿರುವಂತೆ, ನನ್ನ ಉದ್ದೇಶ ವೃದ್ಧಾಶ್ರಮಗಳ ವರದಿ ಮಾಡೋದು ಅಲ್ಲ. ಬಾಳಿನ ಕೊನೆಯ ಅಧ್ಯಾಯ ಅಲ್ಲಿ ಕಳೆಯುವಂತಾದವರ ಕತೆಗಳನ್ನು ದಾಖಲಿಸುವುದು. ಯಾವ ಒತ್ತಡಗಳು, ಸನ್ನಿವೇಶಗಳು ಅವರನ್ನು ಕೊನೆಯ ನಿಲ್ದಾಣಕ್ಕೆ ತಂದು ಬಿಟ್ಟವು? ಅವರಲ್ಲಿ ಸ್ವ-ಇಚ್ಛೆಯಿಂದ ಬಂದವರು ಎಷ್ಟು ಮಂದಿ? ನಿಜವಾಗಿ ಅನಿವಾರ್ಯ ಅನಿಸಿದ ಕೇಸ್‍ಗಳು ಹಾಗೂ ಮಕ್ಕಳು ಮರಿಗಳು ಮನೆಯಿಂದ ವಿನಾಕಾರಣ, ಹೇಗಾದರೂ ಮಾಡಿ, ಹೊರದಬ್ಬಿದ ಉದಾಹರಣೆಗಳು ಎಷ್ಟು?’ ಇತ್ಯಾದಿ ತಿಳಿಯುವುದು”
“ಅದು ಸಾಧ್ಯವಾಯ್ತಾ?”
“ಹೌದು ಮತ್ತು ಇಲ್ಲ!”
“????”
“ ಹಾಗೆ ಪ್ರತಿ ಕೋಣೆಯಂತ ಮನೆಗಳನ್ನು ಹಾದು ಹೋಗುತ್ತಿದ್ದವಳು ಒಂದೆಡೆ ಒಂದು ವೃದ್ಧ ದಂಪತಿಯನ್ನು ಕಂಡೊಡನೆ ‘ ಸಾರ್, ನಾನು ರುಕ್ಮಿಣಿ ನೆನಪಾಯ್ತಾ?’ ಅಂದೆ”
“ ಆ ತಾತ ಪಾಪ, ಕಣ್ಣೊರೆಸುತ್ತಾ ಕನ್ನಡಕ ಸರಿಪಡಿಸುತ್ತಾ ‘ರುಕ್ಮಿಣಿನಾ? ನಂಗ್ಯಾರೂ ಗೊತ್ತಿಲ್ವೇ ಆ ಹೆಸರಿನವರು!’ ಅಂದು ಬಿಟ್ಟ. ಪ್ರಶ್ನಾರ್ಥಕವಾಗಿ ತನ್ನ ಪತ್ನಿ ಕಡೆ ನೋಡಿದ. ಅವಳು ಇಲ್ಲ ಅಂತ ತಲೆಯಾಡಿಸಿದಳು”
“ಸಾರ್ ನಿಮ್‍ಗೆ ಯಾಕೋ ಮರ್ತು ಹೋಗಿರೋ ಹಾಗಿದೆ. ನಿಮ್ಮ ಕಲೀಗ್ ಪಾಟೀಲ್ ರ ಮಗಳು (ಅವನ್ಯಾವನೋ ಪಾಟೀಲ್ ಅಂತ ನಿಜವಾಗಿ ಇದ್ದಿದ್ರೆ ನನ್ನ ಅಲ್ಲೇ ಮುಗಿಸ್ತಿದ್ದ! ಹ ಹ ಹ!) ಅಂದೆ. ನಗ್‍ನಗ್ತಾ ನಿಂತೆ. ಈಗ ತಾತ ಸರಿದಾರಿಗೆ ಬಂದ. ‘ಏನೋ, ಇರ್ಬಹುದು. ನನ್ಗೆ ಮರ್ತು ಹೋಗಿರಬಹುದು’ ಅಂದವ. ‘ಬಾ ಇಲ್ಲಿ ಕೂತ್ಕೋ. ಹೇಗಿದ್ದಾರೆ ಪಾಟೀಲರು?’ ಅನ್ನತ್ತಾ ಒಂದು ಸ್ಟೂಲ್ ಕಡೆ ಕೈ ಮಾಡಿದ.”
ನನಗೆ ಅಷ್ಟೇ ಸಾಕಿತ್ತು. ಆ ಸ್ಟಾಫ್ ಬಳಿ ‘ಇವರು ನನ್ನ ಪÀರಿಚಯದವರು. ಇವರೊಂದಿಗೆ ಸ್ವಲ್ಪ ಕಾಲ ಇದ್ದು ಆಮೇಲೆ ಬರ್ತೇನೆ ಅಂದೆ’ ಆ ಹುಡುಗಿ ತಲೆಯಾಡಿಸಿ ಅಲ್ಲಿಂದ ಮರೆಯಾದಳು.
ಆಮೇಲೆ ಅವರ ಬಳಿ ಸತ್ಯ ಹೇಳಿದೆ. ನಾನು ವೃದ್ಧಾಶ್ರಮದ ಕುರಿತಾಗಿ ಏನೂ ಬರೆಯುವುದಿಲ್ಲ. ನೀವು ಆತಂಕಪಡಬೇಡಿ” ಅಂದೆ. ಬದಲಾಗಿ ನನಗೆ ಅವರು ಅಲ್ಲಿ ಬಂದು ಜೀವನ ಕಳೆಯುವಂತಾಗಲು ಕಾರಣಗಳು ಏನು, ಅವರ ಕತೆಗಳು, ಅವರ ಅಪ್ಪ ಅಮ್ಮಂದಿರನ್ನು ಕೊನೆಗಾಲದಲ್ಲಿ ಅವರು ಹೇಗೆ ನಡೆಸಿಕೊಂಡರು ಇತ್ಯಾದಿ ವಿವರಗಳನ್ನು ಕೆದಕಿದೆ.
ನಿರೀಕ್ಷಿಸಿದಂತೆ ಅವರು ಕಣ್ಣೀರಾದರು. ಅವರು ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರಿಂದ ಹಿಡಿದು ಎಲ್ಲವನ್ನೂ ಹೇಳಲು ಶುರುಮಾಡಿದರು. ಉದ್ಯೋಗ, ಸ್ವಂತ ಉದ್ಯಮದ ಕನಸು, ಪ್ರೇಮ ವೈಫಲ್ಯ, ಮದುವೆ, ಮಗಳ ಸಾವು, ಅನಂತರ ಹುಟ್ಟಿದ ಮಗ, ಅವನ ಮೇಲಿನ ಅತಿಯಾದ ವಾತ್ಸಲ್ಯ---ಪುನ: ಅಳು”
“ಛೇ! ಎಂಥಾ ಕಾಲ ಬಂತು!”
“ ಅಷ್ಟೇ ಅಲ್ಲ! ತಾನು ಉದ್ಯೋಗ ಗಳಿಸಿ, ಮದುವೆಯಾಗಿ ಸಂಸಾರ ಹೂಡಿದೊಡನೆ ಈ ಮುದ್ದಿನ ಮಗನ ಹೊಸ ಅವತಾರ ಶುರುವಾದದ್ದು ಅಂತೆ. ಮೊದಲು ಸೊಸೆಯ ಮಾತನ್ನು ಕೇಳಿ ಹಾಳಾದ ಅಂದುಕೊಂಡವರಿಗೆ ಅವಳಿಂದ ಅವನು ಡಿವೋರ್ಸ್ ಪಡೆದಾಗಲೇ ಗೊತ್ತಾದದ್ದು ಅವನದ್ದೂ ತಪ್ಪಿದೆ ಎಂದು. ಅಷ್ಟರಲ್ಲಿ ಕಾಲ ಮಿಂಚಿತ್ತು.
“ಅಂದ್ರೆ?”
“ಆವಳು ಬೇಗನೆ ಇನ್ನೊಂದು ಮದುವೆಯಾದಳು. ಇವರಿಗೆ ಮುಗ್ಧಳಾಗಿದ್ದ ಸೊಸೆಯ ಆರೈಕೆಯೂ ಇಲ್ಲದಾಯಿತು.”
“ಅವನು ಅದೇನೋ ಸ್ವಂತ ಬಿಸಿನೆಸ್ ಅಂತ ಶುರು ಮಾಡಿದನಂತೆ. ಅಲ್ಲಿಂದ ಏನಾದರೂ ಒಂದು ನೆವÀ ಹೇಳಿ ಇವರು ಉಳಿಸಿದ್ದ ಹಣ ಎಲ್ಲೆಲ್ಲಿ ಇದೆಯೋ ಅದನ್ನೆಲ್ಲಾ ಕರಗಿಸಿದನಂತೆ. ‘ನನಗೆ ಒಳಿತಾದರೆ ನಿಮಗೂ ಒಳ್ಳೆಯದಲ್ಲವೇ?’ ಎಂಬ ಅವನ ತಂತ್ರಗಾರಿಕೆಗೆ ಅವರು ಕೊರಳೊಡ್ಡಿದರಂತೆ”
“ಏನನ್ಯಾಯ!”
“ಆ ಒಂದು ದಿನ ಅವರೇ ತೀರ್ಮಾನಿಸಿದರಂತೆ. ಇನ್ನು ಇವನ ಜೊತೆ ಇರಬಾರದು.
ಅಪ್ಪ ಅಮ್ಮನ ಆರೈಕೆಯಲ್ಲಿ ಸಾರ್ಥಕತೆ ಕಾಣಲಾಗದ, ಭೌತಿಕ ಪ್ರಪಂಚದಾಚೆಗೆÉ ಎಲ್ಲವನ್ನೂ ನಿರಾಕರಿಸುವವನಂತೆ ಬದುಕು ಸಾಗಿಸುವ ಮಗನ ನೆನಪು ಕಾಡುವ ಜಾಗದಿಂದ ಬಿಡುಗಡೆ ಪಡೆದು ಯಾರೊ ಅಪರಿಚಿತರು ಕೈಗೊಳ್ಳುವ ಲಾಲನೆ-ಪಾಲನೆಯಲ್ಲಿ ಬಾಳ ಸಂಜೆಯನ್ನು ಸವೆಸಿದರೆ ಸಾಕೆಂದು”
“ಅಂಥಾದ್ದೇನಾಯಿತು ಆ ದಿನ?”
“ಅವನ ತಾಯಿಯ ಅಳಿದುಳಿದ ಚಿನ್ನಾಭರಣವನ್ನೆಲ್ಲಾ ‘ಕಂಪನಿ ಸ್ಟಾಫ್ ಸಂಬಳಕ್ಕೆ ಈ ತಿಂಗಳು ತಾತ್ವಾರವಾಗಿದೆ’ ಅಂದು ಅಡವಿಟ್ಟು ಬಂದನಂತೆ. ಆದರೆ ಅದನ್ನು ಅವನು ನಿಜವಾಗಿ ಬಳಸಿದ್ದು ಯಾವುದಕ್ಕೆ ಎಂದು ತಿಳಿದು ಬಂದಾಗ ಅವರಿಗೆ ಅವನ ಮೇಲಿದ್ದ ಅಲ್ಪ-ಸ್ವಲ್ಪ ಪ್ರೀತಿಯೂ ನಾಶವಾಯಿತಂತೆ!”
“ಯಾವುದಕ್ಕೆ, ನೀನು ಊಹಿಸು ನೋಡೋಣ!”
“ಹಾರ್ಸ್ ರೇಸ್?”
“ನೋ”
“ಕ್ರಿಕೆಟ್ ಬೆಟ್ಟಿಂಗ್?”
“ನಾಟ್ ಎಟ್ ಆಲ್!”
“ಮಟ್ಕಾ, ಶೇರ್ಸ್?”
“ ಅಯ್ಯೋ ಮಂಕೇ! ಇದ್ಯಾವುದೂ ಅಲ್ಲ! ಅವರ ಮನೆಯೆದುರು, ವನ್ ಫೈನ್ ಮಾರ್ನಿಂಗ್ ಒಂದು ವಿಂಟೇಜ್ ಕಾರ್ ಬಂದು ನಿಂತಾಗಲೇ ಅವರಿಗೆ ಗೊತ್ತಾದದ್ದು---ತಮ್ಮ ಮಗನ ಆದ್ಯತೆಗಳು ಏನು ಎಂದು”
“ ಅಂದ ಹಾಗೆ ಅವರ ಹೆಸರು ಏನು ಅಂದೆ?” ಸರ್ವಸ್ವ ಕಣ್ಣರಳಿಸಿ ಕೇಳಿದಳು.
“ ಹೆಸರು ನೆನಪಾಗ್ತಿಲ್ಲ---ಆದ್ರೆ ಸರ್ ನೇಮ್---“
“ ಪಾಂಡ ತಾನೆ?”
“ಅರೆ? ನಿನಗೆ ಹೇಗೆ ಗೊತ್ತಾಯ್ತು ಅವ್ನ ಹೆಸರು?”
ಸರ್ವಸ್ವ ಲಗುಬಗೆಯಿಂದ ತನ್ನ ಪರ್ಸ್‍ನಿಂದ ಒಂದು ಹಳೆಯ, ಆದರೆ ಮಾಸದ, ಕಪ್ಪು ಬಿಳುಪು ಫೊಟೋ ತೆಗೆದು ಸುರಭಿಯ ಮುಂದಿಟ್ಟಳು. ಅವನು ಸಂದರ್ಶನದ ವರದಿ ಜೊತೆಗೆ ಪ್ರಕಟವಾಗಲಿ ಎಂದು ಕೊಟ್ಟದ್ದು ಆ ಫೊಟೋ.
“ಈ ಹುಡುಗನೇ ದೇಬಶೀಸ್ ಪಾಂಡ. ಇದು ಅವನ ಅಪ್ಪ ಅಮ್ಮ. ಇದು ಅವನ ಅಜ್ಜ ಅಜ್ಜಿ. ಅವರ ಹಿಂದಿರುವುದು ಅವನ ಅಜ್ಜನ ಫಿಯೆಟ್ ಕಾರ್”
ಫೊಟೋ ದಿಟ್ಟಿಸುತ್ತಾ ನಿಂತ ಇಬ್ಬರಿಂದಲೂ ಮಾತೇ ಹೊರಡದಾಯಿತು. ಅವರ ದಿಟ್ಟ ನೋಟ ಈಗ ಅಲ್ಲೆ ಪಾರ್ಕ್ ಮಾಡಿದ್ದ ಕಾರುಗಳು, ಒಳಗೆ ಐಸ್ ಕ್ರೀಮ್, ಚಾಟ್ ಐಟಮ್ಸ್ ಸವಿಯುತ್ತಿದ್ದ ಸಂತುಷ್ಟ ಕುಟುಂಬಳತ್ತ ಸರಿಯಿತು. ಬಾಳು ಕರುಣಿಸುವ ಈ ಕ್ಷಣದ ಸುಖಗಳಲ್ಲೇ ಸಾರ್ಥಕತೆ, ಅರ್ಥವಿದೆ ಅನಿಸಿದವಳಿಗೆ ವಿಂಟೇಜ್ ಭಾಗ್ಯವಿಲ್ಲದ ಎಲ್ಲರ ಜೀವನ ನೆನೆದು ನೆಲ ಅದುರಿದಂತಾಯಿತು.

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...
        Food for Teeth                                    If you thought millions of people in Mera Bharat( that’s Mahan) grapple with the issue of not knowing from where their next meal would come, you are all wrong-or else you are not watching much of the idiot box as much as the people calculating the TRP suppose you do! Now what is TRP? It is Television Rating Points. That’s someone somewhere is glad to know how much you weigh as a couch-potato. So when you are watching TV someone is ‘watching’ you like the BB (Big Brother).  A cute device called ‘People’s Meter’ might have been attached to your TV. Or to the one in one of your neighbors’ house. This device keeps track of what you watch and how often, how long etc. And that info is accessed by the geniuses who are ...