ಇದು ಸದ್ದಡಗಿದ ರಣಹದ್ದುಗಳ ಕಥೆ
ಯಾವ ವೇತನವನ್ನೂ ಪಡೆಯದೆ, ಪ್ರಕೃತಿ ತಮಗೆ ಒದಗಿಸಿದ ಜಾಡಮಾಲಿಯ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪಕ್ಷಿಗಳು ಈ ರಣಹದ್ದುಗಳು. ಪುರಾತನ ವಿಶ್ವದ್ದು, ನೂತನ ವಿಶ್ವದ್ದು ಎಂದು ವಿಂಗಡಿಸಲಾದ ಮತ್ತು 23 ವಿವಿಧ ಜೀವಂತ ಪ್ರಭೇದಗಳಿರುವ, ರಣಹದ್ದುಗಳ ಫೇವರಿಟ್ ಆಹಾರ ಕೊಳೆತ ಮಾಂಸ.
ಕೊಳೆತದ್ದನ್ನು ತಿಂದ ಮೇಲೆ ತಲೆ ಸ್ವಚ್ಛವಾಗಿರಬೇಕಲ್ಲ? ಹೀಗಾಗಿ ರಣಹದ್ದುಗಳದ್ದು ಬಕ್ಕತಲೆ! ಅವುಗಳ ತಲೆಮೇಲೆ ಗರಿಗಳಿಲ್ಲ. ಅಷ್ಟು ಮಾತ್ರವಲ್ಲ, ವಾತಾವರಣದ ತಾಪಮಾನದ ಏರು ಪೇರಿಗೆ ಹೊಂದಿಕೊಳ್ಳಲು ಅದಕ್ಕೆ ಈ ಬಕ್ಕತಲೆÀ ನೆರವಾಗುತ್ತದಂತೆ. ತನ್ನ ಮೇಲೆ ತಾನೇ ಮೂತ್ರ ಮಾಡುವುದು, ಅವು ತಲೆತರಾಂತರದಿಂದ ಕಂಡುಕೊಂಡ ಸರಳ ಕೂಲಿಂಗ್ ತಂತ್ರಜ್ಞಾನ! ನಿತ್ಯ ಸ್ನಾನ ಮಾಡುವ, ಪ್ರತಿ ಗರಿಯನ್ನೂ ಸ್ವಚ್ಛವಾಗಿಡುವ ಅವುಗಳ ನೈರ್ಮಲ್ಯ ಪ್ರಜ್ಞೆಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.
ಆಹಾರ ದೊರೆತಾಗ, ಸಸ್ತನಿಗಳಲ್ಲಿ ಸಾಮಾನ್ಯವಾಗಿ ಹಠಮಾರಿಗಳಿಗೆ ಮೊದಲ ಆದ್ಯತೆ. ದುರ್ಬಲರ ಸರದಿ ಆಮೇಲೆ. ರಣಹದ್ದುಗಳಲ್ಲಿ ಈ ನಿಯಮ ಉಲ್ಟಾ ಆಗುತ್ತದೆ. ಅಲ್ಲಿ ಹಸಿದವರಿಗೆ ಮೊದಲ ಮಣೆ! ಅವು ಸಿಕ್ಕಿದ್ದನ್ನು ಹರಿದು ಮುಕ್ಕಿ ಗಬಗಬನೆ ತಿಂದು ಮುಗಿಸುತ್ತವೆ. ಅವುಗಳ, ಅದರಲ್ಲೂ ಮುಖ್ಯವಾಗಿ ಜಿಪ್ಸ್ ಹೆಸರಿನ ತಳಿಗಳ ಶರೀರದ ವಿನ್ಯಾಸವೇ ಕೊಳೆತದ್ದನ್ನು ತಿನ್ನಲು ಹೇಳಿಮಾಡಿಸಿದಂತಿದೆ. ಅವುಗಳು ಗುಂಪು ಗುಂಪಾಗಿ, ಗರಿಗಳಿಲ್ಲದ ತಮ್ಮ ಉದ್ದವಾದ ಕೊರಳುಗಳÀನ್ನು ಕಳೇಬರದ ಒಳಗೆ ಚಾಚಿ; ಹಸು, ಜಿಂಕೆ ಇವುಗಳ ಶರೀರದ ಮೃದು ಭಾಗಗಳನ್ನು ಕೇವಲ 20 ನಿಮಿಷದಲ್ಲಿ ತಿಂದು ತೇಗಿ ಅಸ್ಥಿಪಂಜರ ಮಾಡಿಬಿಡಬಲ್ಲವು.
ಈ ಕೆಲಸವನ್ನು ಇಲಿ, ನರಿ ನಾಯಿಗಳು ಕೂಡಾ ಮಾಡುತ್ತವೆ. ಆದರೆ ಕೊಳೆತ ಕಳೆಬರಗಳನ್ನು ಅವು ತಿಂದಾಗ ಅದರಿಂದ ಅವುಗಳ ಶರೀರ ಸೇರುವ ಬ್ಯಾಕ್ಟೀರಿಯ ಮುಂತಾದ ಸೂಕ್ಷ್ಮ ಜೀವಿಗಳು ಅಲ್ಲಿ ಮುಂದೆಯೂ ಸಕ್ರಿಯವಾಗಿರುತ್ತವೆಯಾದುರಿಂದ ಅವು ಆ ಬ್ಯಾಕ್ಟೀರಿಯ ತರುವ ರೋಗವನ್ನು ಹರಡಬಲ್ಲವು. ರಣಹದ್ದುಗಳು ಹಾಗಲ್ಲ. ಅವುಗಳ ದೇಹಗಳಲ್ಲಿ ಬ್ಯಾಕ್ಟೀರಿಯಗಳು ಪಚನವಾಗುವುದರಿಂದ, ಬ್ಯಾಕ್ಟೀರಿಯಯುಕ್ತ ಕೊಳೆತ ಕಳೇಬರ ಅವುಗಳ ಶರೀರ ಸೇರುವುದು, ಅನ್ಯ ಜೀವಿಗಳ ಸ್ವಾಸ್ಥ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ರೋಗಕಾರಕ ಸೂಕ್ಷ್ಮ ಜೀವಿಗಳು ಅವುಗಳ ಶರೀರದಲ್ಲೇ ನಾಶವಾಗುವುದರಿಂದ ಅವು ನಿರಪಾಯಕಾರಿಗಳು. ಹೀಗಾಗಿ ಪ್ರಕೃತಿಯೇ ತರಬೇತು ನೀಡಿದ ಏಕೈಕ ಪರಿಪೂರ್ಣ ಜಾಡಮಾಲಿಗಳು ರಣಹದ್ದುಗಳು.
ಮಾರಣ ಹೋಮದ ದಶಕ
ಈ ಹಿಂದೆ ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಎಷ್ಟಿತ್ತೆಂದರೆ ಅವುಗಳ ಗಣತಿಯ ಉಸಬಾರಿಗೆ ಯಾರೂ ಹೋಗಿರಲಿಲ್ಲ! ಅವುಗಳ ಗಣತಿಯಲ್ಲಿ ತೊಡಗಿದ್ದ ಬೋಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪ್ರಧಾನ ವಿಜ್ಞಾನಿ ವಿಭು ಪ್ರಕಾಶ್ಗೆ 1996ರಲ್ಲಿ ಒಂದು ದಿನ ಒಂದು ಅಚ್ಚರಿ ಎದುರಾಗುತ್ತದೆ. ಮರವೊಂದರಲ್ಲಿ ಅವರಿಗೆ ನಿತ್ಯ ಗೋಚರವಾಗುತ್ತಿದ್ದ ರಣಹದ್ದುಗಳು ಮಂಗಮಾಯವಾಗಿವೆ. ಮರಗಳಿಗೆ ಸುತ್ತಿಕೊಂಡವು ಕೆಲವು, ಗೂಡುಗಳಲ್ಲಿ ಕೆಲವು ಮತ್ತು ನೆಲದ ಮೇಲೆ ಕೆಲವು- ಹೆಣಗಳ ಹಿಂದೆ ಬೀಳುವ ಪಕ್ಷಿಗಳೇ ಅಲ್ಲಲ್ಲಿ ಹೆಣಗಳಾಗಿ ಬಿದ್ದಿವೆ. ಇನ್ನು ಬದುಕಿ ಉಳಿದವುಗಳ ಹಾವಿನಂತಹಾ ಕತ್ತುಗಳು ಜೋತಾಡುತ್ತ್ತಿವೆ. ಅವು ಮಂಕು ಕವಿದ ಹಾಗಿವೆ.
1987-88ರಲ್ಲಿ ಭಾರತ್Àಪುರ್ನ ಪ್ರಸಿದ್ಧ ಕೇವಲ್ ದೇವ್ ರಾಷ್ಟ್ರೀಯ ಉದ್ಯಾನವನದಲ್ಲಿ ಅವರು 29 ಚ ಕಿಮೀ ವಿಸ್ತೀರ್ಣದ ಪ್ರದೇಶದಲ್ಲಿ ಕಂಡ ಗೂಡು ಕಟ್ಟಿದ ರಣಹದ್ದುಗಳ ಜೋಡಿ 353ರಷ್ಟು. ಆದರೆ 1996 ಅವುಗಳ ಸಂಖ್ಯೆ ಅರ್ಧಕ್ಕೆ ಕುಸಿದಿತ್ತು. (ಹಿಂದೆಯೇ ನಡೆಸಿದ್ದ ಒಂದು ಸಮೀಕ್ಷೆಯ ಆಧಾರದಲ್ಲಿ ಮಾಡಿದ ಭವಿಷ್ಯದ ಸಂಖ್ಯೆಯ ಅಂದಾಜಿನ ಪ್ರಕಾರ, 1991-92ರಲ್ಲಿ ಅವುಗಳ ಸಂಖ್ಯೆ ಸುಮಾರು 40 ಕೋಟಿ ಇರಬೇಕಿತು.್ತ)
ಅಲ್ಲಿ ಮಾತ್ರವಲ್ಲ, ಹತ್ತು ವರ್ಷಗಳಲ್ಲಿ ಇಡೀ ಭಾರತದಲ್ಲಿ ರಣಹದ್ದುಗಳ ಸಂಖ್ಯೆ 97% ನಷ್ಟು ಕುಸಿದಿತ್ತು! ಅದರಲ್ಲೂ, ಫಕ್ಕನೆ ನೋಡಿದರೆ, ಕೊರಳಿಗೆ ಬಿಳಿಯ ಹೋವಿನ ಹಾರ ಧರಿಸಿದಂತೆ ಕಾಣುವ, ಠೀವಿಯಿಂದ ಪೋಸ್ ಕೊಡುವ ವೈಟ್-ರಿಮ್ಡ್ ರಣಹದ್ದುಗಳ ಸಂಖ್ಯೆ 99.9% ರಷ್ಟು ಕುಸಿದಿತ್ತು. ಬೋಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಮಾಜಿ ನಿರ್ದೇಶಕ ಅಸದ್ ರಹಮಾನಿ ಪ್ರಕಾರ ವಿಶ್ವದ ಯಾವುದೇ ಭಾಗದಿಂದ ವರದಿಯಾಗಿರುವ ಯಾವುದೇ ಪಕ್ಷಿ ಸಂಕುಲದ ಕುಸಿತದಲ್ಲಿ, ಈ ರಣಹದ್ದುಗಳ ಕುಸಿತ ಅತ್ಯಂತ ತೀವ್ರ ಗತಿಯದ್ದು. 2000 ಇಸವಿಯಲ್ಲಿ ಪ್ರಕೃತಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಯೂನಿಯನ್, ರಣಹದ್ದುಗಳಲ್ಲಿ ಮುಖ್ಯವಾಗಿ ಮೂರು ಪ್ರಭೇದಗಳನ್ನು ತೀವ್ರ ವಿನಾಶದ ಅಂಚಿನಲ್ಲಿರುವ ಸಂತತಿ ಎಂದು ಘೋಷಿಸಿತು. ಅಂದರೆ ತುರ್ತು ಕ್ರಮ ಕೈಗೊಳ್ಳದಿದ್ದರೆ, ಅವು ವಿಶ್ವದಿಂದ ಕಣ್ಮರೆಯಾಗಿಬಿಡುವ ಅಪಾಯದಲ್ಲಿದ್ದವು.
ಇನ್ನೊಂದು ಬೆಳವಣಿಗೆಯಲ್ಲಿ, ರಣಹದ್ದುಗಳಿಗೆ ಆಹಾರವಾಗುತ್ತಿದ್ದ ಕೊಳೆತ ಕಳೇಬರಗಳಿಗೆ ಬೀದಿನಾಯಿಗಳು ಮುಗಿಬಿದ್ದವು. ಇದರಿಂದ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿತು ಮತ್ತು ಅದರೊಂದಿಗೆ ರೇಬೀಸ್ ಪ್ರಕರಣಗಳು ಕೂಡಾ ಹೆಚ್ಚಾದವು ಎನ್ನಲಾಗಿದೆ.
ರಣಹದ್ದುಗಳ ಈ ಹನನಕ್ಕೆ ನಾನಾ ಕಾರಣಗಳನ್ನು ಊಹಿಸಲಾಯಿತು. ಬೇಟೆ, ಪಿಡುಗು, ವಾಸಾಸ್ಥಳದ ನಾಶ ಹೀಗೆ ಬಗೆ ಬಗೆಯ ಕಾರಣಗಳನ್ನು ಮುಂದಿಡಲಾಯಿತು. ಮೊದಲು ಕೀಟನಾಶಕಗಳು ಕಾರಣ ಎಂದು ಶಂಕಿಸಲಾಯಿತು. 1960 ದಶಕದಲ್ಲಿ ಡಿಡಿಟಿಯಿಂದ ವಿಷಪ್ರಾಶನಗೊಂಡ ಯು ಎಸ್ ನ ಬಾಲ್ಡ್ ಈಗಲ್ ಗಳಿಗೆ ಇದೇ ಗತಿ ಬಂದಿತ್ತು. ಇನ್ನು ಕೆಲವರು, ‘ಅಮೆರಿಕನ್ನರು ರಣಹದ್ದುಗಳನ್ನು ಹೊತ್ತೊಯ್ದಿದಿದ್ದಾರೆ’ ಎಂದು ದೂರಿ ವಿದೇಶಿ ಹಸ್ತದ ಮೇಲೆ ಗೂಬೆ ಕೂರಿಸಿದರು. ಆದರೆ ಅದಾವುದೂ, ಇಡೀ ದಕ್ಷಿಣ ಏಷ್ಯಾದಲ್ಲಿ ಕಂಡು ಬಂದ ಈ ಪರಿಯ ರಣಹದ್ದುಗಳ ತೀವ್ರ ಕುಸಿತಕ್ಕೆ ಕಾರಣವಾಗಲಾರದು ಎಂಬುದು ಸ್ಪಷ್ಟವಾಗಿತ್ತು.
ಸೂಕ್ತ ಪ್ರಯೋಗಾಲಯಗಳ ಅಭಾವ, ‘ರಣಹದ್ದುಗಳ ಅವಶೇಷಗಳನ್ನು ಪರೀಕ್ಷೆಗಾಗಿ ವಿದೇಶಗಳಿಗೆ ರವಾನೆ ಮಾಡುವಂತಿಲ್ಲ’ ಎಂಬ ಕೆಂಪು ಪಟ್ಟಿಯ ತೊಡಕು ಇವೆಲ್ಲಾ ಹೆಚ್ಚಿನ ತನಿಖೆಗೆ ಅಡ್ಡಿಯಾಯಿತು. ರಣಹದ್ದುಗಳ ಈ ಮಾರಣಹೋಮದ ಹಿಂದಿದ್ದ ಖಳನಾಯಕÀ, ಹಸುಗಳಿಗೆ ತಗುಲಿದ ವಿವಿಧ ಕಾಯಿಲೆಗಳಿಗೆ ನೀಡಿದ್ದ ಔಷಧಿ ಡೈಕ್ಲೋಫನಾಕ್ ಎಂಬುದು ಕೊನೆಗೂ ಪತ್ತೆಯಾದದ್ದು 2003ರಲ್ಲಿ, ಪೆರೆಗ್ರಿನ್ ಫಂಡ್ ವತಿಯಿಂದ ಒಂದು ಅಂತಾರಾಷ್ಟ್ರೀಯ ತಜ್ಞರ ತಂಡ ನಡೆಸಿದ ಸಂಶೋಧನೆಯ ಫಲದಿಂದ. ಹಸುಗಳ ಜ್ವರವನ್ನು ಶಮನಮಾಡಬಲ್ಲ ಈ ಡೈಕ್ಲೋಫನಾಕ್ ಕ್ಷಿಪ್ರ ಕಾರ್ಯಾಚರಿಸುವ ಪರಿಣಾಮಕಾರಿ ನೋವು ನಿವಾರಕ. ಈ ಅಗ್ಗದ ಮದ್ದು ಹಸುಗಳ ಪಾಲಿಗೆ ಒಂದು ರಾಮಬಾಣ, ಹಸು ಮಾಲಿಕರಿಗೆ ಒಂದು ವರದಾನ. ಭಾರತದಂತಹಾ ದೇಶದಲ್ಲಿ ರಣಹದ್ದುಗಳ ಪಾಲಿಗೆ ಅನ್ನ ಅನಿಸಿರುವುದು ಹೇರಳವಾಗಿ ದೊರಕುವ ಹಸುಗಳ ಕೊಳೆತ ಕಳೇಬರಗಳು ಅನ್ನುವುದು ಪರಿಸ್ಥಿತಿ ಬಿಗಡಾಯಿಸಲು ಇನ್ನೊಂದು ಕಾರಣ.
ಹÀಸುಗಳ ಸಾವಿನ ಬಳಿಕ ಅವುಗಳ ಕಳೇಬರಗಳ ಭೂರಿ ಭೋಜನ ಮಾಡಿದ್ದ ರಣಹದ್ದುಗಳ ಶರೀರ ಸೇರಿದ ಡೈಕ್ಲೋಫನಾಕ್, ಅವುಗಳಿಗೆ ‘ಗೌಟ್’ (ಕಿಡ್ನಿ ವೈಫಲ್ಯದಿಂದ ಯುರಿಕ್ ಆಸಿಡ್ ವಿಸರ್ಜಿಸುವುರಲ್ಲಿ ಎದುರಾಗುವ ತೊಡಕು) ಕಾಯಿಲೆಯನ್ನು ದಯಪಾಲಿಸಿದವು. ಅವು ಶಕ್ತಿಗುಂದಿ ಸತ್ತೇ ಹೋದವು. ಇದನ್ನು ಗಮನಿಸಿದ ಬೋಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿ, ಡೈಕ್ಲೋಫನಾಕ್ನ್ನು ಪಶು ಪಕ್ಷಿಗಳ ವ್ಯಾಧಿಗೆ ಔಷಧವಾಗಿ ಬಳಸುವುದರ ವಿರುದ್ಧ ಹೋರಾಡಿತು.
ಕೊನೆಗೂ ಪರಿಸ್ಥಿತಿಯ ಗಂಭಿರತೆಯನ್ನು ಅರ್ಥ ಮಾಡಿಕೊಂಡ ಪರಿಸರ ಪ್ರಿಯರು ಎಚ್ಚೆತ್ತುಕೊಂಡರು. ರಣಹದ್ದುಗಳ ಸಂರಕ್ಷಣೆಗೆ ಚಟುವಟಿಕೆಗಳು ಗರಿಗೆದರಿದವು.
2004ರ ನಂತರ ಭಾರತ, ಪಾಕಿಸ್ತಾನ ಹಾಗೂ ನೇಪಾಳದಲ್ಲಿ ಕನ್ಸರ್ವೇಷನ್ ಬ್ರೀಡಿಂಗ್ (ಸಂರಕ್ಷಿತ ಸಂತಾನೋತ್ಪತ್ತಿ) ಮೂಲಕ ರಣಹದ್ದುಗಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ. ಭಾರತದಲ್ಲಿ ಇಂತಹಾ 8 ಕೇಂದ್ರಗಳಿವೆ. ಬೋಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಹರ್ಯಾಣ ಅರಣ್ಯ ಇಲಾಖೆ ಜಂಟಿಯಾಗಿ ಕೈಗೊಂಡಿರುವ ‘ಜಟಾಯು’ ಅನ್ವರ್ಥ ನಾಮದ ಇಂತಹಾ ಒಂದು ಕೇಂದ್ರದ ಮುಖ್ಯಸ್ಥರಾಗಿ ನೇಮಕವಾಗಿರುವ ಇದೇ ವಿಭು ಪ್ರಕಾಶ್ ಈ ಜಟಾಯುಗಳ ಪಾಲಿಗೆ ಸಾಕ್ಷಾತ್ ಶ್ರೀರಾಮನೇ ಆಗಿಬಿಟ್ಟಿದ್ದಾರೆ!
ಹೀಗೆ ಸಂತಾನೋತ್ಪತ್ತಿಯಾದ ರಣಹದ್ದುಗಳ ಸಂಖ್ಯೆ 2018ರಲ್ಲಿ 162 ತಲುಪಿತು. ಈಗ ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ಆದರೆ 94% ಕುಸಿತದ ಎದುರಿಗೆ ಈ ಸಂತಾನೋತ್ಪತ್ತಿ ದರ ತೀರಾ ಅತ್ಯಲ್ಪ.
ಡೈಕ್ಲೋಫನಾಕ್ನ್ನು ಪ್ರಾಣಿಗಳಿಗೆ ಔಷಧಿಯಾಗಿ ನೀಡುವುದನ್ನು ಭಾರತ, ಪಾಕಿಸ್ತಾನ ಹಾಗೂ ನೇಪಾಳದಲ್ಲಿ 2006ರಿಂದ ನಿಷೇಧಿಸಲಾಗಿದೆ- ಅಂದರೆ ಕಳ್ಳತನದ ನಂತರ ದಿಡ್ಡಿ ಬಾಗಿಲು ಹಾಕಿದಂತೆ ಎಂದು ಅರ್ಥ.
ನಿಷೇಧವಿದ್ದರೂ, ಮನುಷ್ಯರಿಗೆ ಡೈಕ್ಲೋಫನಾಕ್ ಲಭ್ಯತೆ ಮುಂದುವರಿದಿತ್ತು. ಇದನ್ನು ಬಂಡವಾಳ ಮಾಡಿಕೊಂಡ ಕೆಲವರು, ಮನುಷ್ಯರಿಗೆಂದು ಡೈಕ್ಲೋಫನಾಕ್ ಖರೀದಿಸಿ ಅದನ್ನು ಅಕ್ರಮವಾಗಿ ಹಸುಗಳಿಗೆ ನೀಡುವುದನ್ನು ಮುಂದುವರಿಸಿದರು. ಇದನ್ನು ತಡೆಗಟ್ಟಲು, ಭಾರತ ಸರ್ಕಾರ 2015ರಿಂದ ಮನುಷ್ಯರಿಗೆ ಡೈಕ್ಲೋಫನಾಕ್ ಫೋರ್ಮುಲೇಷನ್ ಲಭ್ಯತೆಯ ಪ್ರಮಾಣವನ್ನು 3 ಮಿಲೀಗೆ ಸೀಮಿತಗೊಳಿಸಿತು ಮತ್ತು 30 ಮಿಲೀ ವಿಯಾಲ್ನ್ನು ನಿಷೇಧಿಸಿತು.
ಒಂದು ಆಶಾದಾಯಕ ಬೆಳವಣಿಗೆಯೇನೆಂದರೆ, ಈ ಎಲ್ಲಾ ಪ್ರಯತ್ನಗಳು ಅಲ್ಪಸ್ವಲ್ಪ ಫಲ ನೀಡಲಾರಂಭಿಸಿವೆ. 2017ರ ತರುವಾಯ ರಣಹದ್ದುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.
ಇನ್ನೆಲ್ಲಿಯ ಸಂಸ್ಕಾರ ?
ಪಾರ್ಸಿ ಜನಾಂಗದವರು ತಮ್ಮ ಆಪ್ತರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರ ಮಾಡುವುದು, ರಣಹದ್ದುಗಳಿಗೆ ಅದನ್ನು ತಿನ್ನಲು ಬಿಡುವ ಮೂಲಕ ಅನ್ನುವುದು ಹೊಸ ಸಂಗತಿಯಲ್ಲ. ಆದರೆ ಸತ್ತ ಮೇಲೂ ಸಂಕಟ ಬಿಡದು ಅನ್ನುವ ಹಾಗೆ ಅವರಿಗೆ ಹೆಣ ಕಾಯುವುದರ ಜೊತೆಗೆ ರಣಹದ್ದುಗಳಿಗೆ ಕಾಯುವುದು ಕೂಡಾ ಕಾಯಕವಾಗಿ ಬಿಟ್ಟಿರುವುದು ವಿಧಿಯ ಕ್ರೂರ ವ್ಯಂಗ್ಯ!
ಅವರ ನಂಬಿಕೆಯ ಪ್ರಕಾರ, ಅಂಧÀಕಾರವನ್ನು ಅಪ್ಪಿಕೊಂಡ ಮೃತ ಶರೀರವನ್ನು ಹೂಳಿದರೆ ಅಥವಾ ಸುಟ್ಟರೆ, ಮಣ್ಣು ಮತ್ತು ಗಾಳಿ ಇವೆರಡು ಪಂಚಭೂತಗಳು ಮಲಿನವಾಗಿ ಬಿಡುತ್ತವೆ. ಹೀಗಾಗಿ ಅವರು ಶವಗಳನ್ನು ‘ಧಕ್ಮ’ (ಟವರ್ ಆಫ್ ಸೈಲೆನ್ಸ್-ಮೌನ ಗೋಪುರ) ಗಳಲ್ಲಿ ಬಿಟ್ಟು ಬಿಡುತ್ತಾರೆ. ಅವರ ನಂಬಿಕೆಯಂತೆ ಮೌನ ಗೋಪುರಗಳಲ್ಲಿ ಕಳೇಬರಗಳು ಶಾಂತವಾಗಿರುತ್ತವೆ. ಕಳೇಬರಗಳನ್ನು ರಣಹದ್ದುಗಳಿಗೆ ತಿನ್ನಲು ಬಿಡುವುದು, ಅವರ ಮಟ್ಟಿಗೆ, ಉದಾರತೆಯ ದ್ಯೋತಕ ಕೂಡಾ ಹೌದು.
ಹೇಳಿಕೇಳಿ ಪಾರ್ಸಿಗಳೇ ಅಲ್ಪಸಂಖ್ಯಾತರು. ಈಗ ಅವರ ಶವಸಂಸ್ಕಾರಕ್ಕೆ ಉಚಿತವಾಗಿ ನೆರವಾಗುವ ಈ ‘ಪರಿಚಾರಕರು’ ಕೂಡಾ ಅವರ ಜಾಡನ್ನೇ ಹಿಡಿದಿದ್ದಾರೆ. ಆದರೆ ಅವರ ಮೌನ ಗೋಪುರಗಳ ಅರಣ್ಯ ರೋದನಕ್ಕೆ ಇತರರರು ಕಿವುಡಾಗಿದ್ದಾರೆ. ಅವರೀಗ ವಿದ್ಯುತ್ ಚಿತಾಗರಗಳ ಮೊರೆಹೋಗಿದ್ದಾರಂತೆ. ಸಂಪ್ರದಾಯ ಉಲ್ಲಂಘಿಸಿ ಸಂಸ್ಕಾರಗೊಂಡವರ ಆತ್ಮಗಳು ಅತೃಪ್ತರಾಗಿ ಅಲೆಯುತ್ತಿವೆಯೇನೋ? ತಿಳಿಯುವುದೆಂತು? ಇನ್ನು, ರಣಹದ್ದುಗಳ ಸಂರಕ್ಷಣೆಗೆ ಪಾರ್ಸಿ ಸಮುದಾಯದವರೇ ಮುಂದಾಗಬೇಕಿತ್ತು. ಆದರೆ ಅಂತಹಾ ಚಟುವಟಿಕೆಗಳು ಎಲ್ಲೂ ವರದಿಯಾಗಿಲ್ಲ.
ಇತ್ತ ರಣಹದ್ದುಗಳ ಸದ್ದಡಗಿದೆ. ಅತ್ತ ಮೃತ ಪಾರ್ಸಿಗಳ ಆತ್ಮಕ್ಕೆ ಶಾಂತಿ ಸಿಗುತ್ತಿಲ್ಲ. ಎಲ್ಲಾ ಜೀವಿಗಳ ದೇಹಗಳೂ ರಣಹದ್ದುಗಳ ಪಾಲಾಗುವಂತಿದ್ದರೆ ಇನ್ನೆಷ್ಟು ರಾಸಾಯನಿಕ ರಹಸ್ಯಗಳು ಬಯಲಾಗುತ್ತವೋ ಯಾರಿಗೆ ಗೊತ್ತು?
Comments
Post a Comment