ಸುತ್ತ-ಮುಕ್ತ
ನವರಸಗಳ ನೆಲೆವೀಡು ಈ ನಿಸರ್ಗ
ವರುಷಗಳ ಹಿಂದೆ ತೆರೆಕಂಡ ಪ್ರಸಿದ್ಧ ‘ಲೈಫ್ ಆಫ್ ಪೈ’ ಚಿತ್ರದ ಒಂದು ದೃಶ್ಯ: “ಅದೇನು ನಿನ್ನ ಸಂಗಾತಿ ಅಂದುಕೊಂಡೆಯಾ? ಅದೊಂದು ಮೃಗ!”
ತಾವೇ ಸಾಕಿದ ಹುಲಿಯನ್ನು, ಬೋನಿನ ಹೊರಗಿಂದ ಮಾಂಸದ ತುಣುಕು ನೀಡಿ ಒಲಿಸಿಕೊಳ್ಳಲು ನೋಡುವ ಮಗನನ್ನು ತಂದೆ ಹೀಗೆ ಗದರಿಸುತ್ತಾನೆ. ಅದು ಹುಲಿ. ಶತ್ರುವಲ್ಲ. ಹಾಗೆಂದು ಮಿತ್ರನೂ ಅಲ್ಲ.
ರುದ್ರ, ರಮಣೀಯ, ರೋಚಕ, ಮಾರಕ- ನಿಸರ್ಗ ಇವೆಲ್ಲವೂ ಆಗಿರುವುದು ಕಠೋರ ವಾಸ್ತವ.
ತಾವು ನತದೃಷ್ಟರು ಅಂದುಕೊಂಡಿರುವ ನಗರವಾಸಿಗಳು, ಕೊಡಗಿನ ಚೇತೋಹಾರಿ ಜನಜೀವನ ಕಂಡು ಕರುಬುತ್ತಿದ್ದರು. ಕೆಲವರಿಗೆ ಅಲ್ಲೇ ಬದುಕು ಕಂಡುಕೊಳ್ಳುವಂತಾದರೆ. . . ಎಂದು ಅನಿಸಿದ್ದುಂಟು.
ಆದರೆ 2018ರಲ್ಲಿ ಅಲ್ಲಿ ಸುರಿದ ಪ್ರಯಳ ಸದೃಶ ಮಳೆ ಹಗಲುಗನಸುಗಾರರನ್ನು ಎಚ್ಚರಿಸಿತು. ‘ಲಂಗು ಲಗಾಮಿಲ್ಲದೆ ಬೆಳೆದ ಬೆಂಗಳೂರು ಕೂಡಾ ವರುಣನೆದುರು ಈ ಪರಿ ಸೋಲಲಿಲ್ಲ, ತಾವೇ ವಾಸಿ’ ಅನಿಸಿರಬೇಕು ಅವರಿಗೆ. ಪ್ರಕೃತಿ ಇರುವುದೇ ಹಾಗೆ. ಅದು ನವರಸಗಳ ನೆಲೆವೀಡು. ಹಿಮದ ಹಾಸು ಹೊರಗೆ, ಕಬ್ಬಿಣವೂ ಕರಗುವ ದಾವಾನಲ ಒಳಗೆ-ಇದದರ ಹೂರಣ.
ಇದೇ ಕೊಡಗಿನಲ್ಲಿ, ಕೆಲವು ದಿನಗಳ ಹಿಂದೆ ಗಣ್ಯ ವ್ಯಕ್ತಿಯೊಬ್ಬರು ತಮ್ಮದೇ ತೋಟದಲ್ಲಿ ಜೇನುನೊಣಗಳ ಧಾಳಿಗೆ ಬಲಿಯಾದರು. ವರುಷಗಳ ಹಿಂದೆ ಮುದ್ದು ಬಾಲಕಿ ವೈಷ್ಣವಿ, ಬೆಂಗಳೂರಿನ ಲಾಲ್ ಬಾಗ್ನಲ್ಲಿ ಜೇನುದಾಳಿಗೆ ತುತ್ತಾದಳು. ಕಣ್ಣು ಮಚ್ಚಾಲೆಯಾಡಿ ದಿಗ್ಭ್ರಮೆ ಮೂಡಿಸುವುದು ಪ್ರಕೃತಿಯ ಜಾಯಮಾನ.
ಪ್ರಕೃತಿ, ದಂತ ಚೋರ ಕಾಡುಗಳ್ಳನನ್ನು ಕೂಡಾ ಸಾಕಿ ಸಲಹಿದೆ. ಕಾಡನ್ನೇ ಮನೆ ಮಾಡಿಕೊಂಡಿದ್ದ ಅವನು ಮರ ಮೈಮೇಲೆ ಬಿದ್ದು ಅಥವಾ ಹಾವು ಕಚ್ಚಿ ಸಾಯಲಿಲ್ಲ. ಇದೇ ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನ ಸವಾರರು ಮರಬಿದ್ದು ಪ್ರಾಣತೆತ್ತ ಉದಾಹರಣೆಗಳಿವೆ. ಹಾವಿನ ಕಡಿತಕ್ಕೆ ಬಲಿಯಾದವರೂ ಇದ್ದಾರೆ. ಚಾರಣಕ್ಕೆ ಹೋದವರು ದಾರುಣ ಆಂತ್ಯ ಕಂಡಿದ್ದಾರೆ. ಇತ್ತೀಚೆಗೆ, ಕೇರಳದಲ್ಲಿ ಚಾರಣಕ್ಕೆ ಹೋದವನನ್ನು ಸೇನೆ ರಕ್ಷಿಸಬೇಕಾಯಿತು.
ಸ್ಟೀವ್ ರಾಬರ್ಟ್ ಇರ್ವಿನ್, ಪತ್ನಿ ಸಮೇತನಾಗಿ, ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದ ‘ಮೊಸಳೆ ಬೇಟೆಗಾರ’ ಎಂಬ ಟಿ ವಿ ಸರಣಿ ನಡೆಸಿಕೊಡುತ್ತಿದ್ದ, ಅದೇ ಹೆಸರಿನಿಂದ ಜನಪ್ರಿಯನಾಗಿದ್ದ. ಅವನ ತಂದೆ ತಾಯಿ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ಸ್ಥಾಪಿಸಿ ಬೆಳೆಸಿದ್ದ ಮೃಗಾಲಯವೇ ಇರ್ವಿನ್ ದಂಪತಿಯ ಪ್ರಪಂಚವಾಗಿತ್ತು.
ಕ್ರಾಕಡಯಲ್ ಹಂಟರ್ ಅಲ್ಲದೆ, ಸ್ಟೀವ್ಜೋಡಿ ಇನ್ನೂ ಅನೇಕ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿತ್ತು. ಅವನು ಎತ್ತಿ ಆಡಿ ಮುದ್ದಿಸದ ಉರಗ, ಪ್ರಾಣ, ಪಶು ಪಕ್ಷಿಗಳಿಲ್ಲ. ಪರಿಸರ ವಾದ, ವನ್ಯಜೀವಿಗಳ ಸಂರಕ್ಷಣೆಗೆ ಮುಡಿಪಾಗಿದ್ದ ಕುಟುಂಬ ಅವರದ್ದು.
ತಂದೆ ವನ್ಯ ಜೀವಿಗಳ, ಅದರಲ್ಲೂ ವಿಶೇಷವಾಗಿ ಉರಗ, ಉಭಯಚರಗಳ ತಜ್ಞ. ತಾಯಿ ಅವುಗಳಿಗೆ ಆಶ್ರಯ ಕಲ್ಪಿಸುವುದರಲ್ಲಿ ನಿರತಳು. ಸಹಜವಾಗಿ ಸ್ಟೀವ್ ಇರ್ವಿನ್ ಅವುಗಳ ಲಾಲನೆ ಪಾಲನೆಯಲ್ಲೇ ಬೆಳೆದ, ಆದರೆ ಎಲ್ಲವೂ ಅಪ್ಪನ ಸುಪರ್ದಿಯಲ್ಲಿ, ತರಬೇತಿಯಂತೆ. ಕಾಡಲ್ಲಿ ಬೆಳೆಯಲಿಲ್ಲ ಎಂಬುದನ್ನು ಬಿಟ್ಟರೆ ಅವನು ಥೇಟ್ ಟಾಜó ್ನ್!
ಮೊಸಳೆ, ಉರಗಗಳು ಅವನ ಚಡ್ಡಿ ಗೆಳೆಯರು. ತನ್ನ 6ನೇ ಹುಟ್ಟು ಹಬ್ಬದಂದು 12 ಅಡಿ ಉದ್ದದ ಹೆಬ್ಬಾವನ್ನು ಉಡುಗೊರೆಯಾಗಿ ಪಡೆದ ಅವನು ತನ್ನ 12ನೇ ವಯಸ್ಸಿನಲ್ಲಿ ಮೊಸಳೆ ನಿರ್ವಹಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬರೋಬ್ಬರಿ 100 ಮೊಸಳೆಗಳನ್ನು ಹಿಡಿದು ತಂದ! ಮುಂದೆ ಅವನೇ ಅಂತಾರಾಷ್ಟ್ರೀಯ ಮೊಸಳೆ ಸಂರಕ್ಷಣಾ ಸಂಸ್ಥೆ ಸ್ಥಾಪನೆಗೆ ನೆರವಾದ.
ಉತ್ತಮ ಆದಾಯ, ಹೆಸರು, ಸಂತೃಪ್ತಿ, ಒಂದು ಉದಾತ್ತ ಗುರಿ ಎಲ್ಲವೂ ಇದ್ದವನ ಪಾಲಿಗೆ ನಿಸರ್ಗವೇ ಖಳನಾಯಕನಾಯಿತು. ಆಸ್ಟ್ರೇಲಿಯಾದ ‘ಗ್ರೇಟ್ ಬೇರಿಯರ್ ರೀಫ್’ನಲ್ಲಿ ಒಂದು ಸಾಕ್ಷ್ಯಚಿತ್ರದ ಚಿತ್ರೀಕರಣದ ವೇಳೆ ನೀರಡಿಯಲ್ಲಿ, ಸ್ಟಿಂಗ್ ರೇ ಎಂಬ ಜಲಚರ ತನ್ನ ವಿಷಯುಕ್ತ ಕೊಂಡಿಯಿಂದ ಅವನ ವಕ್ಷಸ್ಥಲವನ್ನು ಪರಚುವುದರೊಂದಿಗೆ, ವನ್ಯಜೀವಿಗಳ ಸಂರಕ್ಷಣೆಯಲ್ಲಿ ಒಂದು ರಮ್ಯ ಅಧ್ಯಾಯ ಕೊನೆಯಾಯಿತು. ನೀರಲ್ಲಿ ಪ್ರಾಣಬಿಟ್ಟ ಅವನ ಮರಣ ಇಡೀ ವಿಶ್ವವನ್ನು ಶೋಕದ ಕಡಲ್ಲಿ ಮುಳುಗಿಸಿತು. ‘ಸಾಗರದ ಮಾರಣಾಂತಿಕ’ ಎಂಬ ಸಾಕ್ಷ್ಯಚಿತ್ರ ಮಾಡುತ್ತಿದ್ದವ ಅದರಲ್ಲೇ ಕೊನೆಯಾದದ್ದು ವಿಪರ್ಯಾಸ!
ಆದರೆ ಸ್ಟೀವ್ ಅಜರಾಮರ. ಅವನ ಸ್ಮರಣಾರ್ಥ ಹೆಸರಿಡಲಾದ ಪಾರ್ಕ್, ರಸ್ತೆ, ಜûೂಗಳು ಅನೇಕಾನೇಕ. ಅವನ ಅಭಿಮಾನಿಗಳಂತೂ ಕೋಟಿ ಕೋಟಿ! ಕ್ಷುದ್ರಗ್ರಹವೊಂದಕ್ಕೆ ಅವನ ಹೆಸರಿಟ್ಟ ಮೇಲೆ ಅವನ ಖ್ಯಾತಿ ಖಗೋಳ ತಲುಪಿತು. ಒಂದು ಹಡಗಿಗೆ ಮಾತ್ರವಲ್ಲ ಒಂದು ಬಸವನಹುಳುವಿನ ಪ್ರಭೇದಕ್ಕೂ ಅವನದ್ದೇ ಹೆಸರು. ದೇವರ ಪಾದ ಸೇರಿದ ಅವನು ಸರ್ವಂತರ್ಯಾಮಿಯಾಗಿ ಹೋದ.
ವಿಶ್ವದಾದ್ಯಂತ ನವೆಂಬರ್ 15ನ್ನು ‘ಸ್ಟೀವ್ ಇರ್ವಿನ್ ದಿನ’ ಎಂದು ಆಚರಿಸುತ್ತಾರಾದರೂ, ಅದು ಅವನು ಮೆಚ್ಚಿದ್ದ ಆಮೆಯೊಂದರ ಜನ್ಮದಿನ, ಅವನದ್ದಲ್ಲ!
ತಮಗೂ ಸದಾ ತಮ್ಮೊಂದಿಗಿರುವ ಪ್ರಾಣಿಗಳಿಗೂ ಮಾರಕವಾದೀತೆಂದು ವೆಡ್ಡಿಂಗ್ ರಿಂಗ್ ಧರಿಸದೇ ಇರುತ್ತಿದ್ದ ಈ ದಂಪತಿ, ಇನ್ನೂ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದಿದ್ದರೆ, ಇಡೀ ಜೀವ ಸಂಕುಲಕ್ಕೆ ಆದ ಈ ನಷ್ಟವನ್ನು ತಡೆಯಬಹುದಿತ್ತೇನೋ?
ರಂಜನೆ, ಭಂಜನೆ ಪ್ರಕೃತಿಗೆ ರೂಢಿಗತ.
Comments
Post a Comment